Monday, December 8, 2025

Adiyen Family Celebration



One auspicious weekend Saturday
Gathered families of Adiyen
To celebrate second successful year
In a different way that's Devin
e

Not the usual office partying
No alcohol and loud music playing
No crowd of carousing people dancing
Only devout people praying
At the break of the dawn
With sky kissed by the Sun
The rituals and havan began
What a way to begin the function
With the Chirping of the birds
And fragrance of the winter mist
Chiming of the temple bells
Devine sound of Vedic chant
Smoke with sweet aroma of ghee,
Rising with the flames in harmony
People bowing with folded hands devoutly,
Seeking blessings from the divine deity
Then came the sumptuous luncheon
What better way for union to conclude
After sharing the experiences with Adiyen
All Departed with blessed and blissful mind

Sunday, December 29, 2024

ದಶಾವತಾರ ಲಾಲಿ ಹಾಡು

ಲಾಲಿ ಶ್ರೀಹರಿಗೆ ಲಾಲಿ ಮಾಧವಗೆ ಲಾಲಿ ಪಾಲ್ಗಡಲ ಶಯನಗೆ |
ಲಾಲಿ ಹತ್ತವತಾರವನು ಮಾಡಿದವಗೆ ಲಾಲಿ ವೈಕುಂಠ ವಾಸನಿಗೆ || ಲಾಲೀ...ಲಾಲೀ..

ಲಾಲಿ ಮೀನಾವತಾರವನು ತಳೆದವಗೆ ಲಾಲಿ ವೇದಗಳ ರಕ್ಷಕಗೆ |
ಲಾಲಿ ಬೆಟ್ಟವನು ಬೆನ್ನಲ್ಲಿ ಪೊತ್ತವಗೆ ಲಾಲಿ ಕೂರ್ಮಾವತಾರಿಗೆ|| ಲಾಲೀ...ಲಾಲೀ..
ಲಾಲಿ ವಸುಧೆಯನು ಕೋರೆಯಿಂ ಪೊರೆದವಗೆ ಲಾಲಿ ಸೂಕರರೂಪಿಗೆ |
ಲಾಲಿ ಕಶಿಪು ಸಂಹಾರಿಗೆ ಪ್ರಹ್ಲಾದ ವರದಗೆ ಲಾಲಿ ಶ್ರೀ ಲಕ್ಷ್ಮೀನರಸಿಂಹಗೆ|| ಲಾಲೀ...ಲಾಲೀ..
ಲಾಲಿ ಬಲಿಯನ್ನು ತುಳಿದು ಜಗವನ್ನೇ ಅಳೆದವಗೆ ಲಾಲಿ ವಾಮನರೂಪಿಗೆ |
ಲಾಲಿ ಜಗತಿರುಗಿ ಖಳನೃಪರ ತರಿದವೆಗೆ ಲಾಲಿ ಶ್ರೀ ಪರಶುರಾಮನಿಗೆ|| ಲಾಲೀ...ಲಾಲೀ..


ಪಾಲಿಸಿ ಪಿತೃವಾಕ್ಯವನು ಧರುಮದಿ ನಡೆದವಗೆ ಲಾಲಿ ರಾಜೀವಲೋಚನಗೆ |
ಲಾಲಿ ಗೋಪಿ ಚಿತ್ತಾಪಹಾರಿಗೆ ಲಾಲಿ ನವನೀತ ಚೋರನಿಗೆೆ|| ಲಾಲೀ...ಲಾಲೀ..
ಕಲಿಯುಗದಿ ಅಸುರರ ಬಲಹೀನ ಗೊಳಿಸಿದವಗೆ ಲಾಲಿ ಅವತಾರ ಬುದ್ಧನಿಗೆ |
ಕಲಿಯುಗದ ಅಂತ್ಯದಿ ಧರುಮವನು ಉದ್ಧರಿಸೆ ಬರುವ ಕಲ್ಕಿ ಅವತಾರಿಗೆ|| ಲಾಲೀ...ಲಾಲೀ..

ಲಾಲಿ ಶಂಖ ಚಕ್ರವ ಪಿಡಿದು ನಿಂತವಗೆ ಲಾಲಿ ಶ್ರೀ ಕೌಶಿಕೇಶ್ವರಗೆ |
ಲಾಲಿ ಹರಿಹಂಸನ ಕುಲದೈವಗೆ ಲಾಲಿ ಶ್ರೀ ಲಕ್ಷ್ಮೀಕೇಶವಗೆ|| ಲಾಲೀ...ಲಾಲೀ..

Sunday, July 21, 2024

ಗುರುವೆಂದರೆ..

 
(ಶ್ರೀ ನಿಸ್ಸಾರ್ ಅಹ್ಮದ್ ಅವರ ಕನ್ನಡವೆಂದರೆ ಎಂಬ ಕವಿತೆಯ ದಾಟಿಯಲ್ಲಿ)

ಗುರುವೆಂದರೆ ಬರಿ ಪದವಲ್ಲ ಹಿರಿದಿದೆ ಅದರ ಮಹಿಮೆ
ಬರಿಮಾತಿನಲಿ ಬಣ್ಣಿಸಲಸದಳ ಅಷ್ಟಿದೆ ಗುರುವಿನ ಗರಿಮೆ

ಗುರುವೆಂದರೆ ಬರಿ ಕಡಲಲ್ಲ ಗುರು ಕರುಣೆಯ ಸಾಗರನು
ಗುರುಕರುಣೆಗೆ ಪಾತ್ರನಾದವನು ಭವ ಸಾಗರ ದಾಟುವನು

ಗುರುವೆಂದರೆ ಬರಿ ನಿಧಿಯಲ್ಲ ಜ್ಞಾನದ ಭಂಡಾರ
ಗುರುಜ್ಞಾನವ ಹರಿಸಲು ಶಿಷ್ಯಗೆ ಅರಿವಿನ ಸಾಕ್ಷಾತ್ಕಾರ

ಗುರುವೆಂದರೆ ಬರಿ ಬೆಳಕಲ್ಲ ತಮ ಕಳೆಯುವ ಜ್ಯೋತಿ
ಶರಣಾದವರಿಗೆ ಮುಕ್ತಿ ಪಥವನು ತೋರುವ ವಿಮಲ ಪರಂಜ್ಯೋತಿ

ಗುರುವೆಂದರೆ ಬರಿ ಯುಕ್ತಿಯಲ್ಲ ಭವ ಬಂಧ ಕಳಚುವ ಶಕ್ತಿ
ಗುರುಕೃಪೆಯಿಂದಲಿ ಮೋಕ್ಷವ ಗಳಿಸಲು ಬೇಕು ಗುರುವಿನಲಿ ಸದ್ಭಕ್ತಿ

Sunday, March 10, 2024

ಶಿವತಾಂಡವ ಸ್ತೋತ್ರ ಕನ್ನಡ ಭಾವಾನುವಾದ

         

ಯಾರ ಜಟೆಗಳಿಂದ ಗಂಗೆ ಧರೆಗೆ ಹರಿದು ಬರುವಳೋ
ಯಾರ ಕಂಠದಲ್ಲಿ ವಿಷ ಭುಜಂಗ ಹಾರ ಭೂಷಣ
ಯಾರ ಡಮರು ನುಡಿದಿದೆ ಡಮಡ್ ಡಮಡ್ ಶಿವ ಶಿವ
ಹರ ಹರ ಶಿವ ಶಿವ ಅದುವೇ ಶಿವನ ತಾಂಡವ ||1||

ಜಲದ ಲಹರಿ ಹರಿಯಲು ಜುಳು ಜುಳು ಹಣೆಯಲಿ
ಅಲೆಯ ಬಲೆಯು ಸುರುಳಿಯಾಗಿ ಸುತ್ತಿರಲು ಜಟೆಯಲಿ
ಫಾಲನೇತ್ರದಲ್ಲಿ ಅಗ್ನಿ ಧಗ ಧಗ ಉರಿದಿದೆ
ಬಾಲಚಂದ್ರ ಶಿರದಲಿ ಪುಳಕವೆನಗೆ ಕ್ಷಣ ಕ್ಷಣ ||2||

ಧರಣಿ ಗಿರಿಯ ಸುತೆಯು ನಂದಿನಿ ಅರ್ಧಾಂಗಿನಿ
ತರಗುಟ್ಟಿದೆ ದಿಗಂತವು ಮನದಿ ಮೋದದಲೆಗಳು 
ಯಾರ ಕೃಪೆಯ ಓರೆನೋಟ ತರಿವುದು ಕಷ್ಟಗಳ
ಹರ ಹರ ಎನಲು ಮನದಿ ತುಂಬಿದ ದಿಗಂಬರ ||3||

ನಾಗಮಣಿಯು ಜಟೆಯಿಂದ  ಕೆಂಪುಕಾತಿ ಚೆಲ್ಲಿದೆ
ಗಗನವು ಕುಂಕುಮವಿಟ್ಟ ವಧುವಿನ ಮೊಗದಂತಿದೆ
ಅಂಗವಸ್ತ್ರ ಹಾರುತ ಮದಗಜದ ತೊಗಲಿನಂತೆ  
ದಿಗ್ಭ್ರಮೆಯಲಿ ಎನ್ನ ಮನವು ಮುದದಿ ಮೋದಗೊಂಡಿತು ||4||

ಸುರರ ಶಿರದಿಂದ ಬಿದ್ದ ಹೂಪರಾಗ ಧೂಳಿನಿಂದ
ಯಾರ ಪಾದ ಪೀಠವು ಸಿಂಗರಿಸಿಗೊಂಡಿದೆಯೋ
ಯಾರ ಜಟೆಯಲಿ ನಾಗರಾಜ ರಾಜಿಸಿರುವನೋ
ಯಾರ ಶಿರಕೆ ಭೂಷಣ ಚಕೊರ ಬಂಧು ಚಂದಿರ ||5||

ಯಾರ ಹಣೆಯ ನೇತ್ರದಿ ಚಿಮ್ಮಿದ ಬೆಂಕಿಯು
ಹೊರಟು ಕಾಮದೇವನನ್ನು ಸುಟ್ಟು ಭಸ್ಮ ಮಾಡಿತೋ
ಯಾರ ಶಿರದಲಿರುವನೋ ಶೀತಲಾರ್ಧಚಂದ್ರನು
ಹರಸಿ ಹರಿಸಲೆಮಗೆ ಸಿರಿಯ ಆ ಮಹಾಕಪಾಲಿಯು ||6||

ವಿಶಾಲ ಹಣೆಯು ಉರಿದಿದೆ ಧಗ ಧಗ ಧಗ ಧಗ
ಭಸ್ಮವಾಗಿ ಹೋದನು ಹೂ ಬಾಣವನು ಬಿಟ್ಟವನು
ವಿಸ್ಮಯಕರ ಚಿತ್ರಗಳನು ಉಮೆಯೆದೆಯಲಿ ಬಿಡಿಸುವ 
ಅಸಮಾನ್ಯ ನೃತ್ಯವದುವೆ ತ್ರಿಲೋಚನನ ತಾಂಡವ ||7||

ಕಾರಿರುಳಿನ ಕತ್ತಲೆಯ ಬಾನಿನ ಕರಿಮೋಡದಂತೆ 
ತೊರುತಿಹುದು   ವಿಷದಿಂದ ಕೊರಳದುವೆ ಹರನ
ಧಾರೆ ಗಂಗೆಯ ಶಿರದಿ ಪೊತ್ತಿಹ ಚರ್ಮಾಂಬರನು
ಶಿರದಿ ಚಂದ್ರನಿಟ್ಟವ ಪೊರೆವ ಭೂಮಿ ಭಾರವ ||8||

ನೀಲ ಕಮಲವರಳಿದಂತೆ ತೋರುತಿಹ ಕಂಠವದುವೆ
ಹಾಲಹಾಲವ ಕಂಠದಲ್ಲೇ ತಡೆದ ನೀಲಕಂಠನು
ಹಲವು ಅಸುರರಾ ಸಂಹರಿಸಿದ ಆ ತ್ರಿಪುರಹರನು
ಕಾಲನಿಗೆ ಕಾಲನಾದ ಅವನನ್ನು ಭಜಿಸುವೆ || 9||

ಯಾರ ಕೊರಳಿನಲ್ಲಿ ಇರುವ ಕದಂಬ ಪುಷ್ಪಹಾರದಿಂದ
ಹೀರಲು ಮಧುರಸವನ್ನು ಭ್ರಮರಗಳು ಭ್ರಮಿಸುತ್ತಿವೆ
ಯಾರು ಕಾಮ ತ್ರಿಪುರಾಸುರ ಭವದ ಅಂತಕನೋ
ಯಾರು ಗಜಾಂಧಕಾಸುರರ ಕೊಂದವನನು ಭಜಿಸುವೆ  ||10||

ಯಾರ ಜಟೆಯ ಸರ್ಪದ ಭುಸುಗುಟ್ಟುವ ಉಸಿರಿನಿಂದ
ಯಾರ ಹಣೆಯ ಅಗ್ನಿಯು ಪ್ರಜ್ವಲಿಸುತ್ತಿದೆಯೋ
ಮೃದಂಗ ನಾದ ನುಡಿದಿದೆ ಧಿಮಿಧ್ಧಿಮಿಧ್ಧಿಮಿಧ್ಧಿಮಿ
ತರಂಗ ತಾಳ ಲಹರಿಗೆ ಶಿವನು ಪ್ರಚಂಡ  ತಾಂಡವ ||11||

ಒಂದೇ ಅವಗೆ ಮುತ್ತು ರತ್ನ ಕಲ್ಲು ಮುಳ್ಳು ಹೊನ್ನು ಮಣ್ಣು
ಒಂದೇ ಅವಗೆ ಸರ್ಪ ಹಾಗೂ ಹೂವಿನಾ ಹಾರವದುವೆ
ಒಂದೇ ಅವಗೆ ಮಿತ್ರ ಶತ್ರು ಚಕ್ರವರ್ತಿ ಭಿಕ್ಷುಕ
ಎಂದು ಭಜಿಪೆ ಸದಾಶಿವನ ಒಂದೇ ದೃಷ್ಟಿ ಭಾವದಲಿ? ||12||

ಎಂದು ಇರುವೆ ಆನಂದದಿ ಗಂಗೆ ಬದಿಯ ಗುಹೆಯಲಿ ?
ಎಂದು ಬಿಟ್ಟು ಕುಮತಿಯನು ಕರವನೆತ್ತಿ ಮುಗಿವೆನು?
ಎಂದು ಕುದೃಷ್ಟಿಯನು ಬಿಟ್ಟು ಹಣೆಗೆ ತಿಲಕವನಿಟ್ಟು ?
ಎಂದು ಚಿತ್ತಶುದ್ದಿ ಪಡೆವೆ ಶಿವ ಮಂತ್ರವನು ಜಪಿಸುತಾ? ||13||

ಯಾರು ನಿತ್ಯವೂ ಈ ಅತಿಉತ್ತಮ ಸೋತ್ರವ
ಸ್ಮರಿಸಿ  ಪಠಿಸಿ ಪಡೆವರೋ  ಚಿತ್ತಶುದ್ಧಿ ಸಂತತ
ಬೇರೆ ಗತಿಯು ಇಲ್ಲ ಬಿಟ್ಟು ಶಿವ ಗುರುವಿನ ಭಕ್ತಿಯ 
ಹರನ ಸ್ಮರಣೆ ಮಾತ್ರದಿಂದ ಮೋಹ  ಪಾಶ ನಾಶವು  ||14||

Tuesday, December 26, 2023

ಗೋಮಾತೆಗೆ ಆರತಿ

ಆರತಿ ಬೆಳಗುವೆ ಜಯ ಗೋಮಾತೆ ಜಯ ಜಯ ಗೋಮಾತೆ|
ಧರೆಯೊಳು ಮನುಜಗೆ ಅಮೃತವ ನೀಡುವ ಮಾತೇ ನೀ ವರದಾತೆ||
ಜಯ ಜಯ ಗೋಮಾತೆ - 1

ಶರಧಿಯ ಮಥಿಸುವ ಸಮಯದಲಿ ಉದಿಸಿ ಬಂದೆ ನೀನು|
ನರರು ಬೇಡಿದ ವರವನು ನೀಡುವ ಸುರಲೋಕದ ಧೇನು
ಜಯ ಜಯ ಗೋಮಾತೆ|| - 2

ದಿಲೀಪ ರಾಜನ ಶಾಪವ ಕಳೆದ ಆ ನಂದಿನಿ ನೀನು|
ಕಲಿಯುಗದಲ್ಲಿ ನಿನ್ನ ಪೂಜಿಪರ ಪಾಪ ಕಳೆವ ಧೇನು||
ಜಯ ಜಯ ಗೋಮಾತೆ - 3

ವಿಶ್ವಾಮಿತ್ರನು ಪ್ರಯತ್ನ ಮಾಡಲು ಸೆಳೆದೊಯ್ಯಲು ನಿನ್ನ|
ವಿಶ್ವಸೇನೆಯನೆ ಸೃಷ್ಟಿಸಿ ಅವನ ಸೋಲಿಸಿದ ಕಾಮಧೇನು||
ಜಯ ಜಯ ಗೋಮಾತೆ - 4

ಪಂಚಗವ್ಯದ ಪ್ರಾಶನದಿಂದಲಿ  ತನುವಿನ ಶುದ್ಧಿಯು|
ಪಂಚಾಮೃತದ ಅಭಿಷೇಕದಿ ಪಾಪನಾಶನವು||
ಜಯ ಜಯ ಗೋಮಾತೆ - 5

ದೇಹವು ನಿನ್ನ ಆಗಿಹುದು ಸರ್ವದೇವತೆಗಳ ತಾಣವು|
ಇಹ- ಪರಲೋಕದಿ ಶ್ರೆಯಕ್ಕೆ ನಿನ್ನ ಪೂಜೆ ಕಾರಣವು||
ಜಯ ಜಯ ಗೋಮಾತೆ -6
                - *ಹರಿಹಂಸ*

ಕನಕಾಭಿಷೇಕ

ಹಿರಿಯ ದಂಪತಿ ಕನಕ ಕೇಶವರಿಗೆ

ಹಿರಿದು ಸಂಭ್ರಮದ ದಿನವದೊಂದು

ಮರಿಮಗನ ಜನನವಾಯಿತು 

ಹರಿಯ ವರಕೃಪೆಯಿಂದಲಿ


ಸುವೀರ ಮೃದುಲ ದಂಪತಿಗಳಿಗೆ

ಸುವಿಚಾರವೊಂದು ಮನದಿ ಮೂಡಿತು

ಸುವರ್ಣಾಭಿಷೆಕವ ಮಾಡಲು ಅಜ್ಜಅಜ್ಜಿಗೆ

ತವಕದಿ ನಿಶ್ಚಯಿಸಿದರು ದಿನವನು


ಮೊದಲದಿನದಿ ಉದಯಕಾಲಕೆ 

ನಾಂದಿಯಿಂದಲಿ ಮೊದಲುಗೊಂಡು

ಉದಕಶಾಂತಿಯು ಸಂಜೆವೇಳೆಗೆ

ಮೋದಕದಿ ಗಣಹೋಮವು ಮರುದಿನ


ಸ್ವಜನರೆಲ್ಲರೂ ಸಂಭ್ರಮದಿ ಸೇರಿರೆ

ಸುಜನರೆಲ್ಲರೂ ಮಂತ್ರ ಪಠನವ ಮಾಡಿರೆ

ಸುಜಲವ ಸುರಿದನು ಮರಿಮಗನು ಮೊದಲು

ರಜತ ಸಾರಣಿಗೆಯಿಂದಲಿ ಹಿರಿಯರಿಗೆ


ಜನರು ಕೂಡಾ ಜಲವ ಸುರಿದರು

ಮನದಿ ತುಂಬಿ  ಸಾರ್ಥಕತೆಯಿಂದಲಿ

ಕನಕ ಕೇಶವರಿಗೆ ಹೀಗೆ ನಡೆಯಿತು

ಕನಕಾಭಿಷೇಕವು ಸಂಭ್ರಮದಿಂದಲಿ

Saturday, August 5, 2023

ನೀಲಕಂಠ

 

(Painting by:Mayura Simha https://www.instagram.com/mayurasimha/)

ಸುರಾಸುರರೆಲ್ಲ ಸೇರಿ ಅಮೃತ ಮಂಥನವ ಮಾಡಿರೆ
ನೊರೆಯಾಗಿ ಸರ್ಪದ ಬಾಯಿಂದ ಹರಿಯಿತು ವಿಷವು
ಪರಿತಪಿಸುತಿರೇ ಮೂರ್ಲೋಕ ಆ ನಂಜಿನಾ ಬೇಗೆಗೆ
ಹರನು ತ್ವರಿತದಿಬಂದು ನುಂಗಿದನು ಹಾಲಹಲವ

ಅಂಜಿದಳು ಉಮೆಯು ಇದನು ಕಂಡು
ನಂಜು ಗಂಡನಿಗೇ ಕೇಡ ಮಾಡುವುದೆಂದು
ಮಂಜುನಾಥನ ಗಂಟಲಲೇ ತಡೆಯಲು ವಿಷವನು
ನಂಜುಕಂಠನಾಗಿ ಕಂಡನು ಆ ಹರನು

ಭಿತ್ತಿಯೊಳು ಕಂಡ ಓ ನೀಲಕಂಠನೇ !
ಚಿತ್ತದೊಳಿರುವ ನಂಜ ಕುಡಿದು ಮನ
ಎತ್ತಲೋ ಪೋಗದಂತೆ ಮಾಡಿ ಎನ್ನ
ಸುತ್ತಿರುವ ಮಾಯೆಕಳಚಯ್ಯನೆಂದ ಹರಿಹಂಸ